Mane Maddu

Collection of Home remedies,care tips,useful tips and cooking/kitchen tips * "ಕನ್ನಡದ ಕಂಪಿನ ಸಿರಿಗಂಧ - ಕನ್ನಡದಲ್ಲಿ ಅಡಿಗೆ ಟಿಪ್ಸ್ ಮತ್ತು ಮನೆಮದ್ದು ಬ್ಲಾಗ್'

ಅರಿಶಿಣ / ಅರಿಸಿನದ ಉಪಯೋಗಗಳು:

ಅರಿಶಿಣ / ಅರಿಷಿಣ / ಅರಿಶಿನ / ಅರಿಸಿನ / ಹಳದಿ - ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಆಗಾಗಿ ಎಲ್ಲ ಪದಗಳು ಬಳಕೆಯಲ್ಲಿವೆ.
                                    
                         


ಮ್ಮ ದೇಶದಲ್ಲಿ ಅರಿಶಿಣ ಮತ್ತು ಕುಂಕುಮಕ್ಕೆ ಒಂದು ಬಹಳ ಮಹತ್ತರವಾದ ಸ್ಥಾನವಿದೆ. ಇದು ಅಡಿಗೆಗಷ್ಟೇ ಸೀಮಿತವಾಗಿಲ್ಲ. ಅರಿಷಿಣಕ್ಕೆ ನಮ್ಮ ದೇಶದಲ್ಲಿ ಅದಕ್ಕಾಗಿಯೇ ಒಂದು ಪವಿತ್ರತೆಯನ್ನು ನೀಡಿದ್ದೇವೆ. ಅರಿಸಿನವನ್ನು ದೇವರಿಗೆ ಪೂಜಿಸಲು, ಬಾಗಿಲ ಹೊಸ್ತಿಲಿಗೆ ಇಡಲು, ಕುಂಕುಮಕ್ಕೆ ಕೊಡುವಾಗ ಮತ್ತು ಅಡಿಗೆಗೆ ಉಪಯೋಗಿಸುತ್ತೇವೆ. ಮುತ್ತೈದೆಯರು ಅದನ್ನು ಒಂದು ವರದಾನವೆಂದು ಉಪಯೋಗಿಸುವರು. ಅರಿಸಿಣ ಒಂದೇ ಈ ರೀತಿ ನಾನಾ ಬಗೆಯಲ್ಲಿ ಉಪಯೋಗಕ್ಕೆ ಬರುವುದು ಮತ್ತು ಅದನ್ನು ದಿನನಿತ್ಯ ಎಲ್ಲರೂ ಯಾವುದಕ್ಕಾದರೂ ಬಳಸಿಯೇ ಬಳಸುತ್ತಾರೆ.
ನಮ್ಮಗಳಿಗಂತೂ ಅರಿಶಿನ - ಕುಂಕುಮವಿಲ್ಲದೆ ಪೂಜೆ ಸಂಪೂರ್ಣವಾಗುವುದೇ ಇಲ್ಲ. ದೇವರ ಪೂಜೆಗಂತೂ ಹೂವಿಲ್ಲದಿದ್ದರೂ ಪರವಾಗಿಲ್ಲ. ಅರಿಷಿಣ- ಕುಂಕುಮವಂತೂ ಇರಲೇ ಬೇಕು. ಈಗಾಗಿ ಅರಿಶಿನವೂ ನಮ್ಮ ದಿನನಿತ್ಯದ ಅಡಿಗೆಯಲ್ಲಿ, ಪೂಜೆಯಲ್ಲಿ ಒಂದಾಗಿದೆ. ಮುತ್ತೈದೆಯರು ಪ್ರತಿದಿನ ಅದನ್ನು ಮಾಂಗಲ್ಯಕ್ಕೆ ಹಚ್ಚುವುದರಿಂದ ಶ್ರೇಯಸ್ಸು ಮತ್ತು ಒಳ್ಳೆಯದಾಗುವುದು. ಹೊಸಲಿಗೆ ಪ್ರತಿದಿನ ಇಡುವುದರಿಂದ ಕ್ರಿಮಿ-ಕೀಟಗಳ ಹತೋಟಿ ಇರುತ್ತದೆ ಮತ್ತು ಶುಭ ಸಂಕೇತವೂ ಆಗಿದೆ. ನಮ್ಮ ಬೆಳಗಿನ ಕೆಲಸಗಳು ಪ್ರಾರಂಭವಾಗುವುದೆ ಅರಿಸಿನದಿಂದ. ಒಳ್ಳೆಯ ಶುಭಕಾರ್ಯಗಳಿಗೂ ಸಹ ಅರಿಶಿನಕ್ಕೆ ಅದರದ್ದೇ ಆದ ಮಹತ್ವವಿದೆ. ಎಲ್ಲಾ ಶುಭ ಸಂದರ್ಭದಲ್ಲೂ ಇದನ್ನು ಬಳಸುತ್ತೇವೆ.
ಅರಿಶಿಣದ ಕೊಂಬು ಚಿನ್ನದ ಮಾಂಗಲ್ಯಕ್ಕೆ ಸಮಾನವಾಗಿದೆ, ಕೆಲವರು ಅರಿಷಿಣದ ಕೊಂಬನ್ನೆ ಮದುವೆಯಲ್ಲಿ ಮಾಂಗಲ್ಯವಾಗಿ ಉಪಯೋಗಿಸುವರು. ಆಗಾಗಿ ಇದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಮತ್ತು ಕಟ್ಟಲಾರದ ಬೆಲೆ ಇದೆ. ಅರಿಶಿನದ ದಾರ ಹೀಗೆ ಇದು ಹಲವಾರು ಬಗೆಯಲ್ಲಿ ಬಳಸಲು ಅನುಕೂಲವಾಗಿದೆ.


೧.ಅರಿಸಿನವನ್ನು ಹಾಲಿನ ಕೆನೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ, ಮುಖದಲ್ಲಿನ ಗುಳ್ಳೆಗಳು ಕಮ್ಮಿಯಾಗುತ್ತವೆ ಮತ್ತು ಹೊಳಪು ಬರುತ್ತದೆ.

೨.ಅರಿಸಿನದ ಪುಡಿಯನ್ನು ಕಡಲೆಹಿಟ್ಟಿಗೆ ಬೆರೆಸಿ,ಹಾಲಿನೊಂದಿಗೆ ಕಲೆಸಿ ಸಹ ಮುಖಕ್ಕೆ ಹಚ್ಚಬಹುದು.

೩.ಅರಿಶಿನದ ಪುಡಿಯನ್ನು ಸ್ವಲ್ಪ ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ.

೪.ಇದು ಆಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡಿಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ.

೫.ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿಣದ ಪುಡಿಯನ್ನು ಗಾಯದ ಮೇಲೆ ಹಾಕಿ ಅದುವುದರಿಂದ ರಕ್ತ ಬರುವುದು ನಿಲ್ಲುತ್ತದೆ. (ಚಿಕ್ಕ ಗಾಯಗಳಿಗೆ) ಆಂಟಿಸೆಪ್ಟಿಕ್ ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.
೬.ಅರಿಶಿಣದ ಕೊಂಬನ್ನು ಹಾಲಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಗುಳ್ಳೆಗಳು ಇಲ್ಲವಾಗುತ್ತವೆ ಮತ್ತು ಮುಖವು ಹೊಳಪು ಬರುತ್ತದೆ. ಇದು ಅರಿಷಿಣದ ಪುಡಿಯಲ್ಲಿ ಕಲೆಸಿ ಹಚ್ಚುವುದಕ್ಕಿಂತ ತುಂಬಾ ಉತ್ತಮವಾದದ್ದು. ಅಂಗಡಿಯಲ್ಲಿ ತಂದ ರೆಡಿಮೇಡ್ ಪುಡಿ ಉಪಯೋಗಿಸುವುದರಿಂದ ಹೆಚ್ಚು ಅನುಕೂಲ ದೊರೆಯದು, ಅದರಲ್ಲಿ ಕೆಲವು ಬಣ್ಣ ಮಿಶ್ರಿತವಾಗಿರುತ್ತವೆ. ಆದ್ದರಿಂದ ತೇದು ಹಚ್ಚುವುದರಿಂದ ಸ್ವಚ್ಛವಾದ ಅರಿಸಿನ ಸಿಗುತ್ತದೆ.

ಅಡಿಗೆ ಸೋಡದ ಉಪಯೋಗಗಳು:

. ಅಡಿಗೆ ಸೋಡಾದಿಂದ ಫ್ರಿಡ್ಜ್ ಅನ್ನು ಒರೆಸಿದರೆ ಅದರಲ್ಲಿರುವ ವಾಸನೆ ಹೋಗುತ್ತದೆ ಮತ್ತು ಶುಚಿಯಾಗುತ್ತದೆ.
. ನೆಲ ಒರೆಸುವಾಗ ಒಂದೆರಡು ಚಮಚ ಅಡಿಗೆ ಸೋಡವನ್ನು ನೀರಿನಲ್ಲಿ ಬೆರೆಸಿ ಒರೆಸಿದರೆ ಶುಭ್ರವಾಗುತ್ತದೆ.
. ಒಡವೆಗಳನ್ನು ಅಡಿಗೆ ಸೋಡಾದಿಂದ ತೊಳೆದಾಗ ಹೊಳೆಯುತ್ತವೆ.
. ಬೀರು ಒಳಗೆ,ಕಬೋರ್ಡ್ ಒಳಗೆ,ಅಡಿಗೆ ಕೋಣೆಗಳಲ್ಲಿ ಮತ್ತು ಫ್ರಿಡ್ಜ್ ಒಳಗೆ,ಒಂದು ಡಬ್ಬಿಯಲ್ಲಿ ಸೋಡಾ ಹಾಕಿ,ಡಬ್ಬಿಯನ್ನು ಮುಚ್ಚದೆ ತೆರೆದಿಟ್ಟು ಇಟ್ಟರೆ ಅವುಗಳಲ್ಲಿರುವ ಒಂದು ತರಹ ಕೆಟ್ಟವಾಸನೆ ಬರುವುದನ್ನು ಸೋಡಾ ಹೀರಿಕೊಳ್ಳುತ್ತದೆ.
. ಸಿಂಕ್ ಕಟ್ಟಿಕೊಂಡಾಗ ಅದಕ್ಕೆ ಅಡಿಗೆ ಸೋಡಾ ಮತ್ತು ವಿನಿಗರ್ ಅನ್ನು ಹಾಕಿ, ಒಂದೆರಡು ನಿಮಿಷದ ನಂತರ ಅದಕ್ಕೆ ಬಿಸಿನೀರನ್ನು ಹಾಕುವುದರಿಂದ ಕಟ್ಟಿಕೊಂಡಿರುವ ಸಿಂಕ್ ಕ್ಲೀನ್ ಆಗುತ್ತದೆ.
. ಪಾತ್ರೆಯನ್ನು ತೊಳೆಯುವಾಗ ವಾಶಿಂಗ್ ಲಿಕ್ವಿಡ್ ಜೊತೆ ಸ್ವಲ್ಪ ಸೋಡಾ ಮತ್ತು ವಿನಿಗರ್ ಅನ್ನು ಬೆರೆಸಿಕೊಂಡು ಪಾತ್ರೆಯನ್ನು ತೊಳೆದರೆ ಪಾತ್ರೆಗಳು ಸ್ವಚ್ಛವಾಗುತ್ತವೆ ಮತ್ತು ಹೊಳೆಯುತ್ತವೆ.
. ವಿನಿಗರ್ ಹಾಕಿ ಪಾತ್ರೆಯನ್ನು ತೊಳೆಯುವುದರಿಂದ ಪಾತ್ರೆಯಲ್ಲಿನ ಕೆಟ್ಟ ಕಟು ವಾಸನೆಗಳು ಹೋಗುತ್ತವೆ.

" ಓಂ ಶ್ರೀ ಮಹಾ ಘಂ ಗಣಪತೆಯೇ ನಮಃ "




ರೊಟ್ಟಿ ಮತ್ತು ಚಪಾತಿಯ ಟಿಪ್ಸ್:

೧. ರೊಟ್ಟಿ ಮಾಡುವಾಗ ಸ್ವಲ್ಪ ನೀರನ್ನು ಕುದಿಸಿ, ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನಿಮಿಷ ಬಿಟ್ಟು ಅದನ್ನು ಗೊಟಾಯಿಸಿ, ಕಲೆಸಿ, ಚೆನ್ನಾಗಿ ನಾದಿ ರೊಟ್ಟಿ ಮಾಡಿದರೆ ರೊಟ್ಟಿಗಳು ದೋಸೆಯಂತೆ ಮೃದುವಾಗಿ ಬರುತ್ತವೆ. (ಇದು ಒಂದು ರೀತಿ)
೨. ರೊಟ್ಟಿ ಹಿಟ್ಟನ್ನು ಕಲೆಸುವಾಗ ಅದಕ್ಕೆ ಒಂದು/ಎರಡು ಚಮಚ ಡಾಲ್ಡ ಅಥವಾ ವೆಜೆಟಬಲ್ ಗೀಯನ್ನು ಮತ್ತು ನೀರಿನ ಜೊತೆ ಹಾಲನ್ನು ಸೇರಿಸಿ ಕಲೆಸಿ, ಚೆನ್ನಾಗಿ ನಾದಿ,ರೊಟ್ಟಿ ಮಾಡಿದರೆ ರೊಟ್ಟಿಗಳು ಮೃದುವಾಗಿ ಬರುತ್ತದೆ ಮತ್ತು ಬೇಯಿಸುವಾಗ ಉಬ್ಬುತ್ತದೆ.(ಈ ರೀತಿ ಸಹ ಒಂದು)
೩. ಇದೇರೀತಿ ಚಪಾತಿ ಹಿಟ್ಟಿಗೂ ಕಲೆಸಿದರೆ ಚಪಾತಿಗಳು ಸಹ ಚೆನ್ನಾಗಿ ಮೃದುವಾಗಿ ಬರುತ್ತವೆ ಮತ್ತು ರುಚಿಯಾಗಿಯೂ ಇರುತ್ತದೆ.
೪. ಚಪಾತಿ ಹಿಟ್ಟನ್ನು ತುಂಬಾ ಹೊತ್ತಿನವರೆಗೂ ಕಲೆಸಿ ಇಡಬೇಡಿ. ತುಂಬಾ ಹೊತ್ತು ನೆನೆಸಿದರೆ ಅದರಲ್ಲಿರುವ ಅಂಶಗಳೆಲ್ಲಾ ಹಾಳಾಗುತ್ತವೆ. ಅರ್ಧ ಅಥವಾ ಮುಕ್ಕಾಲು ಗಂಟೆ ನೆನೆಸಿದರೆ ಸಾಕು. ಹೆಚ್ಚೆಂದರೆ ಹದಿನೈದು ನಿಮಿಷಗಳಷ್ಟೇ ಸಾಕು.
೫. ಚಪಾತಿ ಹಿಟ್ಟನ್ನು ಕಲೆಸಿ ತಂಗಳು ಪೆಟ್ಟಿಗೆಯಲ್ಲಿ ಸಹ ಇಟ್ಟು ಉಪಯೋಗಿಸಿದರೆ ಅದರಲ್ಲಿನ ಸತ್ವಗಳೆಲ್ಲಾ ನಶಿಸುತ್ತವೆ.
೬. ಹಿಟ್ಟನ್ನು ತುಂಬಾ ಹೊತ್ತು ನೆನೆಸಿದರೆ ಚಪಾತಿಗಳೇನೋ ಮೃದುವಾಗಿ ಬರುತ್ತವೆ,ಆದರೆ ಅದರಲ್ಲಿನ ಒಳ್ಳೆಯ ಸತ್ವಯುತ ಅಂಶಗಳು ಇರುವುದಿಲ್ಲ.
೭. ಗೋಧಿ ಹಿಟ್ಟು ಬೀಸಲು ಕೊಡುವಾಗ ಅದಕ್ಕೆ ಮೆಂತ್ಯ,ಹೆಸರುಕಾಳು ಮತ್ತು ಉಪ್ಪು ಹಾಕಿ ಬೀಸಿಟ್ಟುಕೊಂಡರೆ,ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.ಜೊತೆಯಲ್ಲಿ ಸೋಯಾಬೀನ್ಸ್ ಸಹ ಸೇರಿಸಬಹುದು.
೮. ರಾಗಿ ರೊಟ್ಟಿ ತಯಾರಿಸುವಾಗ ರಾಗಿ ಹಿಟ್ಟಿನೊಂದಿಗೆ ಸ್ವಲ್ಪ ಗೋಧಿಹಿಟ್ಟು ಸೇರಿಸಿ ಕಲೆಸಿ,ರೊಟ್ಟಿ ತಯಾರಿಸಿದರೆ,ರೊಟ್ಟಿಗಳು ಮುರಿದುಕೊಳ್ಳದೆ ಚೆನ್ನಾಗಿ ಬರುತ್ತವೆ.
೯. ಯಾವುದೇ ತರಹದ ರೊಟ್ಟಿಗಳು ತಯಾರಿಸುವಾಗ ಕೆಲವೊಮ್ಮೆ ಅದಕ್ಕೆ ಕೆಲವು ತರಕಾರಿಗಳನ್ನು ಸೇರಿಸಿ ತಯಾರಿಸಿದರೆ, ರುಚಿಯೂ ಬೇರೆ ರೀತಿಯಾಗಿ ಚೆನ್ನಾಗಿರುತ್ತದೆ. ಮತ್ತು ವಿಟಮಿನ್ಸ್ ಮತ್ತು ಪ್ರೋಟಿನ್ಸ್ ಸಿಗುತ್ತದೆ ಹಾಗೂ ಬಗೆಬಗೆಯ ರೊಟ್ಟಿಗಳನ್ನು ಸವಿಯಬಹುದು.

ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಹುಣಸೇಹಣ್ಣು ಮತ್ತು ಉಪ್ಪು ಹಾಕಿ ಉಜ್ಜಿ, ತೊಳೆಯುವುದರಿಂದ ತಾಮ್ರ/ಹಿತ್ತಾಳೆ ವಸ್ತುಗಳು ಹೊಳೆಯುತ್ತವೆ.
ಕೆಮ್ಮಣ್ಣು ಸಹ ಹಾಕಿ ಉಜ್ಜಿ ತೊಳೆಯುವುದರಿಂದಲೂ ತಾಮ್ರ/ಹಿತ್ತಾಳೆ ವಸ್ತುಗಳು ಹೊಳೆಯುತ್ತವೆ.
ಆದಷ್ಟು ಪೀತಾಂಬರಿ ಅಂತಹ ಪೌಡರ್ ಗಳನ್ನು ಉಪಯೋಗಿಸದಿರಿ, ಇದರಿಂದ ನಿಮಗೆ ಕೆಲವು ತೊಂದರೆಗಳು ಉಂಟಾಗುತ್ತವೆ. ಅದರಲ್ಲಿ ಕೆಮಿಕಲ್ಸ್ ಹಾಕಿರುವುದರಿಂದ ಅದು ಅಷ್ಟು ಒಳ್ಳೆಯದಲ್ಲ.